*ಮಂಗಳೂರು.* ಒಂದೇ ಬಾರಿ ತ್ರಿವಳಿ ತಲಾಖ್ ಹೇಳಿದರೆ ಇಸ್ಲಾಂ ಧರ್ಮದ ಪ್ರಮಾಣಗಳ ಪ್ರಕಾರ ಸಿಂಧುವಾಗುತ್ತಿದ್ದು ಆದರೆ ಇಸ್ಲಾಂ ಧರ್ಮ ತಲಾಖ್ ಹೇಳುವುದಕ್ಕೆ ಪ್ರೋತ್ಸಾಹ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಹೇಳಿದ್ದಾರೆ
ಎಸ್ ಜೆ ಯು ರಾಜ್ಯ ಸಮಿತಿ ಮಂಗಳೂರು ಪುರಭವನದಲ್ಲಿ ಹಮ್ಮಿಕೊಂಡ ತ್ರಿವಳಿ ತಲಾಖ್ ಮಾಹಿತಿ ಶಿಬಿರದಲ್ಲಿ ವಿಷಯ ಮಂಡನೆ ಮಾಡಿ ಅವರು ಮಾತನಾಡುತ್ತಿದ್ದರು.
ಯಾರೋ ಅಲ್ಪ ಜ್ಞಾನಿಗಳು ತಲಾಖ್ ದುರುಪಯೋಗ ಪಡಿಸಿಕೊಳ್ಳುವ ಕಾರಣ ತಲಾಖ್ ಎನ್ನುವುದು ಒಂದು ಸಮಸ್ಯೆಯಂತೆ ಬಿಂಬಿಸಲ್ಪಡುತ್ತಿದೆ.
ನಿಜವಾಗಿ ಗಂಡು - ಹೆಣ್ಣು ದಾಂಪತ್ಯ ಜೀವನ ಯಾವ ಕಾರಣಕ್ಕೂ ಮುಂದುವರಿಸಲು ಸಾಧ್ಯವಿಲ್ಲವೆನ್ನುವ ಹಂತ ತಲುಪಿದಾಗ ಕೆಲವು ನಿಬಂಧನೆಗಳ ಮೂಲಕ ತಲಾಖ್ ಹೇಳುವುದಕ್ಕೆ ಪ್ರಪಂಚ ಸೃಷ್ಟಿಕರ್ತ ಅಲ್ಲಾಹು ಸ್ಥಾಪಿಸಿದ ಇಸ್ಲಾಂ ಧರ್ಮ ಅನುಮತಿ ನೀಡಿದೆ.ಇದನ್ನು ಪ್ರಶ್ನಿಸುವುದು ಅಥವಾ ತಲಾಖ್ ಇಸ್ಲಾಂ ಧರ್ಮ ದಲ್ಲಿ ಇಲ್ಲ ಎಂದು ಹೇಳುವುದು ಧರ್ಮ ಧಿಕ್ಕಾರ ಪ್ರವೃತ್ತಿಯಾಗಿದೆ.
ಇಸ್ಲಾಂ ಧರ್ಮದ ಬಾಲ ಪಾಠವನ್ನು ಕೂಡ ತಿಳಿಯದ ಕೆಲವು ಅವಿವೇಕಿಗಳು ತಲಾಖ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
ತಲಾಖ್ ,ಬಹುಪತ್ನಿತ್ವ ಮೊದಲಾದ ಸೂಕ್ಷ್ಮ ವಿಚಾರಗಳ ಬಗ್ಗೆ ಸರಕಾರ, ನ್ಯಾಯಾಲಯಗಳು ಯಾವುದೇ ತೀರ್ಮಾನ ಹೇಳುವಂತಿಲ್ಲ.
ಧಾರ್ಮಿಕ ವಿಧಿ ವಿಧಾನಗಳು ಮುಸ್ಲಿಂ ವಿದ್ವಾಂಸರು ಇಸ್ಲಾಂ ಧರ್ಮದ ಪ್ರಮಾಣ ಗ್ರಂಥಗಳ ಆಧಾರದಲ್ಲಿ ತೀರ್ಮಾನಿಸುವಂಥದ್ದಾಗಿದೆ.
ಮಾನವ ಸಮುದಾಯದ ಇಹ ಪರ ವಿಜಯಕ್ಕಾಗಿ ಸೃಷ್ಟಿಕರ್ತ ಅಲ್ಲಾಹು ಸ್ಥಾಪಿಸಿದ ಇಸ್ಲಾಂ ಎಂಬ ಪ್ರಕೃತಿ ಧರ್ಮದ ತತ್ವ ಸಿದ್ದಾಂತಗಳು ಕಾಲಕಾಲಕ್ಕೆ ಬದಲಾಗುವಂಥದ್ದಲ್ಲ ಎಂದು ಬೇಕಲ ಉಸ್ತಾದ್ ಮಾರ್ಮಿಕವಾಗಿ ನುಡಿದರು.
ವರದಿ: ಪುಣಚ ಝುಹ್ ರಿ
Comments
Post a Comment