Skip to main content

ಪೆರ್ನಾಲ್ ಸಂಭ್ರಮ ಧಾರ್ಮಿಕ ಚೌಕಟ್ಟು ಮೀರಿ ಆಚರಿಸುವುದು ಮುಸ್ಲಿಮರಿಗೆ ಭೂಷಣವಲ್ಲ* ✍🏻 *ಕೆ.ಎ.ಅಬ್ದುಲ್ ಅಝೀಝ್ ಝುಹ್ ರಿ ಪುಣಚ*

☪🌍☪🌍☪🌍☪🌍☪🌍☪

*ಪೆರ್ನಾಲ್ ಸಂಭ್ರಮ ಧಾರ್ಮಿಕ ಚೌಕಟ್ಟು ಮೀರಿ ಆಚರಿಸುವುದು ಮುಸ್ಲಿಮರಿಗೆ ಭೂಷಣವಲ್ಲ*
➖➖➖➖➖➖➖➖➖➖➖

*ಪವಿತ್ರ ರಂಝಾನ್ ತಿಂಗಳು ವಿಶ್ವಾಸಿ ವೃಂದದೊಂದಿಗೆ ವಿದಾಯ ಹೇಳಿದಾಗ ಜಾಗತಿಕ ಮುಸ್ಲಿಂ ಸಮುದಾಯದ ಬಳಿಗೆ ಸಾಂತ್ವನ ಸ್ಪರ್ಶ ನೀಡುತ್ತಾ ಆಗಮಿಸುವ ಶವ್ವಾಲ್ ತಿಂಗಳು ರಂಝಾನ್ ವ್ರತಾಚರಣೆಯ ಸಮಾರೋಪವಾಗಿದೆ.*

*ಒಂದು ತಿಂಗಳುಗಳ ಕಾಲ ಪ್ರಭಾತದಿಂದ ಪ್ರದೋಷದ ತನಕ ಅಖಿಲ ಬ್ರಹ್ಮಾಂಡ ಸೃಷ್ಟಿ-ಸಂಹಾರ ಕರ್ತ ಅಲ್ಲಾಹುವಿನ ತೃಪ್ತಿಗಾಗಿ ಅನ್ನ ಪಾನೀಯಗಳನ್ನು ತ್ಯಜಿಸಿ ಕಡ್ಡಾಯ ವ್ರತಾನುಷ್ಠಾನ ಕೈಗೊಂಡು ಶುದ್ಧ ಹೃದಯವಂತರಾಗಿ ಧಾರ್ಮಿಕ ನವಚೈತನ್ಯ ದೊಂದಿಗೆ ಈದುಲ್ ಫಿತ್ರ್ ಎಂಬ ಮಹತ್ವಪೂರ್ಣ ಹಬ್ಬಾಚರಣೆ ಮಾಡುವಾಗ ರಂಝಾನ್ ತಿಂಗಳ ತಾಜಾ ಪವಿತ್ರತೆ ಮೇಳೈಸಿರಬೇಕಾದದ್ದು ಅನಿವಾರ್ಯವಾಗಿದೆ.*

*ಮಾನವರ ಸಂತೋಷ-ಸಂಭ್ರಮಗಳೆಲ್ಲವೂ ಇಸ್ಲಾಂ ಧರ್ಮದ ಚೌಕಟ್ಟನ್ನು ಮೀರಬಾರದೆಂಬ ಮಹೋನ್ನತ ಸಂದೇಶವನ್ನು ಈದುಲ್ ಫಿತ್ರ್ ಅಥವಾ ಪೆರ್ನಾಳ್ ಹಬ್ಬ ಜಗತ್ತಿಗೆ ಸಾರುತ್ತಿದೆ.*

*ರಂಝಾನ್ ತಿಂಗಳ ಕೊನೆಯ ದಿನದ  ಪ್ರಜ್ವಲ ಸೂರ್ಯ, ಪಶ್ಚಿಮ ಬಾಂದಳದಿಂದ ಮರೆಯಾದಾಗ ಶವ್ವಾಲ್ ತಿಂಗಳ ಬಾಲಚಂದಿರ ಪಶ್ಚಿಮ ಬಾನಂಗಳದಲ್ಲಿ ಬೆಳ್ಳಿ ಕಿರಣಗಳನ್ನು ಮೂಡಿಸುತ್ತಾ ಪ್ರತ್ಯಕ್ಷವಾಗುವಾಗ ಜಾಗತಿಕ ಮುಸ್ಲಿಂ ಸಮುದಾಯದ ಮೈಮನಗಳಲ್ಲಿ ಸಂಭ್ರಮ,ಸಡಗರದ ಅಲೆಗಳೇಳ ತೊಡಗುತ್ತದೆ.*
*ಸತ್ಯವಿಶ್ವಾಸಿಗಳ ತುಟಿಗಳಿಂದ ಹೊರಡುವ ಅಲ್ಲಾಹು ಅಕ್ಬರ್ ( ಅಲ್ಲಾಹು ಮಹೋನ್ನತನು ) ಎಂಬ ಮಧುರ ಧ್ವನಿಗಳು ದಿಗಂತ ಬೇಧಿಸುತ್ತಾ  ಸಾಗತೊಡಗುತ್ತವೆ.*

*ಶವ್ವಾಲ್ ಒಂದರ ಸೂರ್ಯನು ಪೂರ್ವದಿಕ್ಕಿನಲ್ಲಿ ವರ್ಣಚಿತ್ತಾರ ಬಿಡಿಸಿ ಪ್ರಪಂಚಕ್ಕೆ ಹೊಂಬೆಳಕು ಚೆಲ್ಲುತ್ತಾ ಧಾವಿಸಿ ಬರುವಾಗ ಮಕ್ಕಳು, ಪುರುಷರು, ಮಹಿಳೆಯರೆಲ್ಲ ಮಿಂದು, ಶುಭ್ರ ವಸ್ತ್ರಧಾರಿಗಳಾಗಿ ಈದುಲ್ ಫಿತ್ರ್ ಸಂಭ್ರಮವನ್ನು ಕೊಂಡಾಡಲು ಹಾತೊರೆಯುತ್ತಾರೆ.*

*ತಕ್ಬೀರ್ ಧ್ವನಿಗಳನ್ನು ಉಚ್ಚರಿಸುತ್ತಾ ಪುರುಷರು, ಬಾಲಕರು ಮಸೀದಿ ಅಥವಾ ಈದ್ಗಾದ ಕಡೆಗೆ ಆತ್ಮಾನುಭೂತಿಯ ಹೆಜ್ಜೆಗಳನ್ನು ಹಾಕುವಾಗ,ಮಹಿಳೆಯರು,ಯುವತಿಯರು,ಬಾಲಕಿಯರು ಮನೆಯಲ್ಲೇ ಈದುಲ್ ಫಿತ್ರ್ ನಮಾಝ್ ನ ಅನರ್ಘ್ಯ ನಿಮಿಷಗಳನ್ನು ಅನುಭವಿಸಿ ಆತ್ಮ ಸಂತೃಪ್ತಿ ಪಡೆಯುತ್ತಾರೆ.*

*ಮದರಂಗಿಯ ವರ್ಣಚಿತ್ತಾರಗಳನ್ನು ಕೈಗಳಿಗೆ ಲೇಪಿಸುತ್ತಾ ಆನಂದಾತಿರೇಕದ ಸಾಗರದಲ್ಲಿ ತೇಲಾಡುವ ಯುವತಿಯರು, ಈದುಲ್ ಫಿತ್ರ್ ಹಬ್ಬವನ್ನು ಮನದಣಿಯೇ ಆಚರಿಸಿ ಸಂಭ್ರಮ ಪಡುತ್ತಾರೆ.*

*ಈದುಲ್ ಫಿತ್ರ್ ಅಂಗವಾಗಿ ಅರ್ಹರು ಅರ್ಹರನ್ನು ಹುಡುಕಿ ಕಡ್ಡಾಯ ದಾನವಾದ ಫಿತ್ರ್ ಝಕಾತ್,ಪ್ರತಿಯೊಬ್ಬರ ಪರವಾಗಿ 2 ಕಿಲೋ 600 ಗ್ರಾಂ ಆಯಾ ಪ್ರದೇಶದ ಆಹಾರ  ಧಾನ್ಯಗಳನ್ನು ನೀಡುವ ಮೂಲಕ ವ್ರತಾಚರಣೆಯ ಸಂಪೂರ್ಣ ಪ್ರತಿಫಲ ಪಡೆದು ಆತ್ಮಸಂತೃಪ್ತಿ ಅನುಭವಿಸುವ ನಿಮಿಷಗಳನ್ನು ವರ್ಣಿಸಲಸಾಧ್ಯ.*

*ಸೂರ್ಯೋದಯದ ಬಳಿಕ ಅಲ್ಪ ಸಮಯ ಕಳೆದು ಆರಂಭವಾಗುವ ಈದುಲ್ ಫಿತ್ರ್ ನಮಾಝ್ ನಿರ್ವಹಿಸಿದ ಬಳಿಕ ಮಸೀದಿ, ಈದ್ಗಾಗಳಿಗೆ ತೆರಳಿದವರು ಪರಸ್ಪರ ಈದುಲ್ ಫಿತ್ರ್ ಶುಭಾಶಯಗಳನ್ನು ವಿನಿಮಯ ಮಾಡುತ್ತಾ ಹಬ್ಬದ ಆನಂದವನ್ನು ಅನುಭವಿಸುವ ನೋಟ ನಿಜಕ್ಕೂ ಕಣ್ಣಿಗೊಂದು ಹಬ್ಬ!*

*ಈದುಲ್ ಫಿತ್ರ್ ನಮಾಝ್ ಬಳಿಕ ಪ್ರತಿಯೊಬ್ಬರೂ ಮನೆಮನೆಗಳಿಗೆ ತೆರಳಿ ಹಬ್ಬದ ತಿಂಡಿ ತಿನಿಸುಗಳು, ಭೂರಿ ಭೋಜನವನ್ನು ಸವಿದು  ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವುದು ಎಲ್ಲೆಡೆ ನಡೆದು ಬರುತ್ತಿರುವ ಒಂದು ಉತ್ತಮ ಸಂಪ್ರದಾಯವಾಗಿದೆ.*

*ಯಾವುದಾದರೂ ಕಾರಣ ಗಳಿಂದಾಗಿ ಪರಸ್ಪರ ಕೋಪಿಸಿಕೊಂಡವರು ಕೂಡ ಈದುಲ್ ಫಿತ್ರ್ ಹಬ್ಬದಂದು ಎಲ್ಲವನ್ನೂ ಮರೆತು ಸಹೋದರತೆ ಮೆರೆಯುತ್ತಾರೆ.*
*ಆದರೆ ಈ ಬಗ್ಗೆ ಅಸಡ್ಡೆ ತೋರಿಸಿ ಹಿಂದಿನ ಅದೇ ವೈರತ್ವದಲ್ಲಿ ಮುಂದುವರಿಯುವ ಭಾಗ್ಯಹೀನರು ಕೂಡ ನಮ್ಮ ನಡುವೆಯಿದ್ದಾರೆನ್ನಲು ದುಃಖ ವಾಗುತ್ತಿದೆ.*

*ಇತರ ಸಮುದಾಯ ಬಾಂಧವರನ್ನು ಕೂಡ ಹಬ್ಬದ ಸಂದರ್ಭದಲ್ಲಿ ಮನೆಗೆ ಕರೆದು ಸತ್ಕರಿಸುವುದು ನಮ್ಮ ನಡುವೆ ಕಾಣುವ ಉತ್ತಮ ಸಂಪ್ರದಾಯವಾಗಿದೆ.*
*ಇತರ ಜನಸಮುದಾಯದವರು ಅನ್ಯರಲ್ಲ,ಮಾನವರು ಸಹೋದರರು ಎಂಬ ವಿಶ್ವ ಭ್ರಾತೃತ್ವ ಭಾವನೆಗಳನ್ನು ತೋರ್ಪಡಿಸುವ ಮೂಲಕ ಮುಸ್ಲಿಂ ಸಮುದಾಯ ಮಾನವ ಸೌಹಾರ್ದತೆಯ ಮಹೋನ್ನತ ಸಂದೇಶವನ್ನು ಸಾರಿ ,ಇಸ್ಲಾಂ ಧರ್ಮದ ಶಾಂತಿ, ಸೌಹಾರ್ದತೆಯ ಬೋಧನೆಗಳನ್ನು ಈ ವೇಳೆ ಮನುಕುಲಕ್ಕೆ ನೆನಪಿಸಲಾಗುತ್ತಿದೆ.*

*ಹಬ್ಬದ ಸಂಭ್ರಮದ ನಡುವೆ ವಿವಿಧ ಕಡೆಗೆ ಅನಗತ್ಯ ಸುತ್ತಾಟ ಇಂದಿನ ಒಂದು ಸರ್ವೇಸಾಮಾನ್ಯ ದೃಶ್ಯ.*
*ಯುವಕರು,ಬಾಲಕರು ಹೀಗೆ ಎಲ್ಲರೂ ಧಾರ್ಮಿಕ ಚೌಕಟ್ಟು ಮೀರಿ ಸುತ್ತಾಟ ನಡೆಸುವ ಮೂಲಕ ಹಬ್ಬದ ಪಾವಿತ್ರ್ಯತೆಗೆ ಧಕ್ಕೆ ತರಲೆತ್ನಿಸುವುದು ದೊಡ್ಡ ದುರಂತವೆನ್ನದೆ ವಿಧಿಯಿಲ್ಲ.*

*ಈದುಲ್ ಫಿತ್ರ್ ಆಗಲಿ ಇನ್ನಿತರ ಯಾವುದೇ ಹಬ್ಬಗಳಾದರೂ ಇಸ್ಲಾಂ ಧರ್ಮದ ಚೌಕಟ್ಟು ಮೀರಿ ಸಂಭ್ರಮ ಪಡೆಯುವಾಗ ಅದಕ್ಕೆ ಯಾವುದೇ ಪ್ರತಿಫಲ ವಿರುವುದಿಲ್ಲ.ಅದು ಅಲ್ಲಾಹುವಿನ ಕೋಪಕ್ಕೆ ಕಾರಣವಾಗುತ್ತದೆ.*
*ಅಲ್ಲಾಹು ಇಷ್ಟಪಡುವ ರೀತಿಯಲ್ಲಿ ದರ್ಗಾ ಝಿಯಾರತ್,ಕುಟುಂಬಿಕರ ಖಬ್ರ್ ಸಂದರ್ಶನ ಮೂಲಕ ಉತ್ತಮ ಕಾರ್ಯಗಳನ್ನು ಮಾಡುವ ಬದಲು, ತಲೆಗೆ ಹಸಿರು ರುಮಾಲುಗಳನ್ನು ಸುತ್ತಿ ಬೈಕ್,ಕಾರುಗಳಲ್ಲಿ ವಿಕೃತವಾಗಿ ವರ್ತಿಸುತ್ತಾ ಸಾಗುವ ಕೆಲವು ದಾರಿತಪ್ಪಿದ ಯುವಕರ ಗುಂಪುಗಳನ್ನು ಎಲ್ಲೆಡೆಗಳಲ್ಲೂ ಕಾಣಬಹುದು.*
*ನಿಜವಾಗಿ ಇದು ಇಸ್ಲಾಂ ಧರ್ಮದೊಂದಿಗೆ ತೋರುವ ಧಿಕ್ಕಾರವಾಗಿದೆ.*
*ಈ ಕೆಟ್ಟ ಸಂಪ್ರದಾಯಕ್ಕೆ ಇನ್ನಾದರೂ ಕಡಿವಾಣ ಹಾಕಿ,ಇಸ್ಲಾಮೀ ಹಬ್ಬಗಳ ಮಹತ್ವವನ್ನು ಎತ್ತಿ ತೋರಿಸಲು ಪ್ರತಿಯೊಬ್ಬರೂ ಮುಂದಾಗಬೇಕು.*

*ಸತ್ಯವಿಶ್ವಾಸಿಗಳು ನನಗಾಗಿ ಸಂತೋಷ ಪ್ರಕಟಮಾಡಿ ನನ್ನ  ವಿನೀತ ದಾಸರಾಗಿ ಪರಲೋಕ ಯಶಸ್ಸು ಪಡೆಯಬೇಕೆಂದು, ಅಲ್ಲಾಹು ನಮಗೆ ಕೊಡುಗೆಯಾಗಿ ನೀಡಿದ ಸಂಭ್ರಮವನ್ನು ,ಅನಿಸ್ಲಾಮಿಕ ಮಾಪಿಳೆಪಾಟ್, ಗಾನ ಮೇಳ ಮೊದಲಾದ ಮ್ಯೂಸಿಕ್ ಸಹಿತವಿರುವ ಅನಿಷ್ಟ ಸಂಪ್ರದಾಯಗಳ ಮೂಲಕ ಅಂದಗೆಡಿಸುವುದು ನೈಜ ಮುಸ್ಲಿಮರಿಗೆ ಭೂಷಣವಲ್ಲ.*
*ಅಲ್ಲಾಹು ಹಾಗೂ ಅಲ್ಲಾಹುವಿನ ಅಂತಿಮ ಪ್ರವಾದಿ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ ಸ್ವಲ್ಲಾಹು ಅಲೈಹಿವ ಸಲ್ಲಂ ತಂಙಳ್ ಇಷ್ಪಡುವ ರೀತಿಯಲ್ಲಿ ಇಸ್ಲಾಂ ಧರ್ಮದ ಚೌಕಟ್ಟನ್ನು ಮೀರದೆ ಹಬ್ಬಾಚರಣೆ ಮಾಡುವ ಮೂಲಕ ನಾವೆಲ್ಲರೂ ಈದುಲ್ ಫಿತ್ರ್ ಹಬ್ಬದ ಪಾವಿತ್ರ್ಯತೆಯನ್ನು ಕಾಪಾಡೋಣ.*

✍🏻 *ಕೆ.ಎ.ಅಬ್ದುಲ್ ಅಝೀಝ್ ಝುಹ್ ರಿ ಪುಣಚ*

🌍🌍🌍🌍🌍🌍🌍🌍🌍🌍🌍

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.