*ಮಂಗಳೂರು.* ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಭವ್ಯ ಭಾರತ ದೇಶದ ಮಹೋನ್ನತ ಸಂವಿಧಾನ ಎಲ್ಲಾ ವರ್ಗದ ಜನತೆಯ ಆಶಾಕಿರಣವಾಗಿದೆ ಎಂದು ಎಸ್ ಎಸ್ ಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಹೇಳಿದ್ದಾರೆ.
ರಾಜ್ಯ ಎಸ್ ವೈ ಎಸ್ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಂಡ ಪ್ರಜಾಪ್ರಭುತ್ವ ಜಾಗೃತಿ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ದೂರ ದೃಷ್ಟಿಯ ಪಲವಾಗಿ 1950 ಜನವರಿ 26 ರಂದು ರಚನೆಗೊಂಡ ಸಂವಿಧಾನ ಎಲ್ಲಾ ಧರ್ಮ, ಜಾತಿ,ಪಂಥ ಗಳ ಆಶಯಗಳಿಗೆ ಪೂರಕವಾಗಿದ್ದು ಇದನ್ನು ದುರ್ವ್ಯಾಖ್ಯಾನ ಮಾಡುವ ಮೂಲಕ ಇಡೀ ನ್ಯಾಯಾಂಗ ವ್ಯವಸ್ಥೆಗೆ ಅಪಚಾರ ಮಾಡಲಾಗುತ್ತಿದೆ.
ಸರ್ವ ಜನಾಂಗದವರ ತವರೂರಾಗಿದ್ದು ಭಾರತದಲ್ಲಿ ಯಾವ ರೀತಿಯ ವಿಭಜನಾವಾದಗಳೂ ಯಶಸ್ವಿ ಯಾಗದೆಂದು ಅವರು ಹೇಳಿದರು.
ಮುಖ್ಯ ಭಾಷಣ ಮಾಡಿದ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಯವರು "ವೈವಿಧ್ಯಮಯ ಸಂಸ್ಕೃತಿಗಳ ತವರೂರಾದ ಭಾರತವನ್ನು ಮಹಾತ್ ಗಾಂಧೀಜಿ, ಜವಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ರಂಥ ಸರ್ವಧರ್ಮ ಸಹಿಷ್ಣುತಾ ವಾಧಿಗಳು ಒಗ್ಗಟ್ಟಿನಿಂದ ಮುನ್ನಡೆಸಿ ಸೌಹಾರ್ದ ಪರಂಪರೆಯ ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ.
ಇಸ್ಲಾಂ ಧರ್ಮ ಹಾಗೂ ಕ್ರೈಸ್ತ ಸಂಸ್ಕೃತಿಗೆ ರತ್ನಗಂಬಳಿ ಹಾಸಿ ಸ್ವಾಗತ ನೀಡಿ ಭಾರತದ ಭಾಗವಾಗಿಸಿದ ಹಿಂದೂ ಸಮುದಾಯ ಸೌಹಾರ್ದತೆಯ ಪ್ರತೀಕವಾಗಿದೆ.
ಮಂದಿರ ,ಮಸೀದಿ, ಚರ್ಚ್ ಗಳು ಮಾನವೀಯತೆಯ ತಾಣಗಳೇ ಹೊರತು ಮಾನವ ಮನಸ್ಸುಗಳನ್ನು ಒಡೆಯುವ ಕೇಂದ್ರ ಗಳಲ್ಲ.
ಸಂವಿಧಾನ ಬದ್ಧ ವಾಗಿ ಸಹಬಾಳ್ವೆ ನಡೆಸುವ ಎಲ್ಲಾ ಪ್ರಯತ್ನಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಹತ್ತಿಕ್ಕಲಾಗುವುದು.
ಭಾರತದ ಮಣ್ಣಿನ ಪ್ರತಿ ಕಣಗಳಲ್ಲೂ ಭಾರತೀಯತೆ ಅಂತರ್ಲೀನವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಮಾತನಾಡಿ, ಧಾರ್ಮಿಕ ಕಾರ್ಯಾಚರಣೆ ಯೊಂದಿಗೆ ಸಮಾಜದ ಕಟ್ಟ ಕಡೆಯಲ್ಲಿರುವವರ ಏಳಿಗೆಗಾಗಿ ಸಾಂತ್ವನ ಯೋಜನೆ ಮೂಲಕ ಎಸ್ ವೈ ಎಸ್ ಸಮಾಜದ ನಾಡಿ ಸ್ಪಂದನ ಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿದೆ.
ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಗಳಲ್ಲಿ ಸಂಘಟನೆಯ ಶಾಖೆ ಗಳನ್ನು ರಚಿಸುವ ಮೂಲಕ ರಾಜ್ಯದ ಜನತೆಗೆ ಮಾನವೀಯ ಸಂದೇಶಗಳನ್ನು ಸಾರಲು ಯೋಜನೆ ಹಾಕಿ ಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಇಹ್ಸಾನ್ ರಾಜ್ಯಾಧ್ಯಕ್ಷ ಎನ್.ಕೆ.ಎಂ.ಶಾಫಿ ಸ ಅದಿ ಬೆಂಗಳೂರು ಮಾತನಾಡಿ, ಜನರ ಹಕ್ಕುಗಳ ರಕ್ಷಣೆಗೆ ನಿಲ್ಲಬೇಕಾದ ದೇಶದ ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದ್ದು ಸ್ವಾರ್ಥ ರಾಜಕೀಯ ಪಕ್ಷಗಳಿಂದಾಗಿ ದೇಶದ ನೆಮ್ಮದಿ ಹಾಳಾಗಿದೆ.
ಧರ್ಮ ಗಳ ವಿಷಯದಲ್ಲಿ ಸರಕಾರಗಳ ಹಸ್ತಕ್ಷೇಪ ಸಂವಿಧಾನ ವಿರೋಧಿ ಕೃತ್ಯವಾಗಿದೆ.
ಇಸ್ಲಾಂ ಧರ್ಮದ ಶರೀಅತ್ ನಲ್ಲಿ ಹಸ್ತಕ್ಷೇಪ ಮಾಡುವ ಎಲ್ಲಾ ಪ್ರಯತ್ನಗಳನ್ನು ಹತ್ತಿಕ್ಕಲಾಗುವುದು ಎಂದು
ಅವರು ಆವೇಶ ಭರಿತರಾಗಿ ನುಡಿದರು.
ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ಮಾತನಾಡಿ,ಭಾರತದ ಸಂವಿಧಾನ ವ್ಯವಸ್ಥಿತವಾಗಿ ರಚನೆಗೊಂಡ ಕಾರಣ ಇಡೀ ಭಾರತೀಯ ಸಮುದಾಯ ನಿರ್ಭಯದಿಂದ ಬದುಕುತ್ತಿದ್ದಾರೆ.
ಕೆಲವರ ಕುಹಕ,ಅಪಪ್ರಚಾರಗಳಿಗೆ ಕಿವಿಗೊಡಬಾರದು.
ಭಾರತೀಯರೆಲ್ಲ ಒಂದೇ ತಾಯಿಯ ಮಕ್ಕಳಂತೆ ಜೀವಿಸಿ ಇಡೀ ಜಗತ್ತಿಗೆ ಮಾದರಿಯಾಗಬೇಕೆಂದು ಅವರು ಹೇಳಿದರು.
ಮಂಗಳೂರು ಮಹಾನಗರಪಾಲಿಕೆ ಯ ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ, ಭಾರತ ಸ್ವಾತಂತ್ರ್ಯದಲ್ಲಿ ಹಿಂದೂ- ಮುಸ್ಲಿಂ ಸಮುದಾಯದ ಧೀರ ದೇಶ ಪ್ರೇಮಿಗಳು ಭುಜಕ್ಕೆ ಭುಜ ಕೊಟ್ಟು ಹೋರಾಡಿದ್ದಾರೆ.
ಸ್ವತಂತ್ರ ಭಾರತದ ಸಂವಿಧಾನ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶ ಕಲ್ಪಿಸುತ್ತಿದೆ.
ಭಾರತದ ಸೌಹಾರ್ದ ಪರಂಪರೆಯನ್ನು ಅಳಿಸಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ ಇಂಥಾ ಷಡ್ಯಂತ್ರಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್ ವೈ ಎಸ್ ಉಡುಪಿ ಜಿಲ್ಲಾಧ್ಯಕ್ಷ ಕೋಟೇಶ್ವರ ತಂಙಳ್, ಬಿ.ಎಂ.ಮುಮ್ತಾಝ್ ಅಲಿ, ಎಸ್ ಎಸ್ ಎಫ್ ದ.ಕ.ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ,ಸುಹೈಲ್ ಖಂದಕ್,ಅಶ್ರಫ್ ಸ ಅದಿ ಮಲ್ಲೂರು,ಸಿದ್ದೀಖ್ ಸಖಾಫಿ ಮೂಳೂರು,ಕಲ್ಕಟ್ಟ ರಝ್ವಿ,ಖಾಸಿಂ ಪದ್ಮುಂಜ,ಅಲ್ತಾಫ್ ಕುಂಪಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಸ್ವಾಗತಿಸಿದರು.
*ವರದಿ: ಕೆ.ಎ.ಅಬ್ದುಲ್ ಅಝೀಝ್ ಝುಹ್ ರಿ ಪುಣಚ*
◽◽◽◽◽◽◽◽◽◽◽
Comments
Post a Comment