
ಉಳ್ಳಾಲದ ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟ್ ಅಧೀನದಲ್ಲಿ ಹಲವಾರು ವರ್ಷಗಳು ಮುಫತ್ತಿಷ್ ಆಗಿ ಸೇವೆಗೈದಿದ್ದ ಎ ಸಿ ಎ ಕಾಂತಪುರಂ ಉಸ್ತಾದ್ ಇಂದಿಗೂ ಉಳ್ಳಾಲದ ಜನಮಾನಸದಲ್ಲಿ ಅಮರರಾಗಿರುವರು. ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರ ಪ್ರಾರಂಭಿಕ ಶಿಷ್ಯರೂ, ತನ್ನೂರಿನವರೂ ಆದ ಎಸಿಎ ಕಾಂತಪುರಂ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಪ್ರಗಲ್ಭ ವಿದ್ವಾಂಸರೂ, ಅಗಾಧ ಜ್ಞಾನಿಯೂ ಆಗಿದ್ದರು. ಉಸ್ತಾದರು ಉಳ್ಳಾಲದಲ್ಲಿ ಮುಫತ್ತಿಷ್ ಆಗಿದ್ದಂತಹ ಸಂದರ್ಭದಲ್ಲಿ ಎಲ್ಲರ ಪ್ರೀತಿಗೆ, ಮೆಚ್ಚುಗೆಗೆ ಪಾತ್ರರಾಗಿದ್ದರು. ಮದ್ರಸ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನು ಸ್ರಷ್ಟಿಸಿದ್ದರು. ಮದ್ರಸ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಕಲಿಕಾ ವ್ಯವಸ್ಥೆಯಲ್ಲಿ ನವ ಹುಮ್ಮಸ್ಸು, ನವ ಚೈತನ್ಯವನ್ನು ತುಂಬಿದ್ದರು. ಅದೇ ಕಾರಣದಿಂದ ಅಂದಿನ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ, ಊರವರಿಗೂ ಉಸ್ತಾದರೊಂದಿಗೆ ಅಗಾಧ ಗೌರವ ಈಗಲೂ ಇದೆ. ನನ್ನ ಪೂರ್ತಿ ಮದ್ರಸ ಜೀವನದ ಮುಫತ್ತಿಶ್ ಆಗಿದ್ದ ಉಸ್ತಾದರು ಅವರು ಮದ್ರಸಕ್ಕೆ ಇಂದು ಭೇಟಿಯಾಗುವರು ಎಂಬ ವಾರ್ತೆ ಮದ್ರಸ ಅಧ್ಯಾಪಕರಿಂದ ತಿಳಿದರೆ ಕಲಿಕೆಯಲ್ಲಿ ಎಲ್ಲರಿಗಿಂತ ಮುಂದೆ ಇದ್ದರೂ ಎದೆ ನಡುಕ ಪ್ರಾರಂಭವಾಗುತ್ತಿತ್ತು. ನಾನು ಅಕ್ಕರೆಕೆರೆ ಮದ್ರಸದಲ್ಲಿ ನಾಲ್ಕನೇ ತರಗತಿಯಲ್ಲಿದ್ದಾಗ ತಜ್ವೀದ್ ನಿಯಮದ ಮತ್ತು ಅಕ್ಷರ ಉಚ್ಛಾರಣೆಯ ಕುರಿತು ಒಂದೊಂದು ಪ್ರಶ್ನೆ ಕೇಳಿದ್ದರು. ಸಲೀಸಾಗಿ ಅದರ ಉತ್ತರವೂ ನೀಡಿದ್ದೆ. ಮತ್ತಷ್ಟು ಕಲಿಕಾ ಪ್ರಗತಿಗಾಗಿ ಅಂದು ನನ್ನ ಮುಂದೆ ನನ್ನ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿದ್ದರು. ಇಂದಿಗೂ ಅದು ನನ್ನ ಮನಃ ಪಟಲದಲ್ಲಿ ಚಿರಾಯುವಾಗಿದೆ. ಮದ್ರಸ ಜೀವನದ ನಂತರ ಸರಿ ಸುಮಾರು 20 ವರ್ಷಗಳ ಬಳಿಕ ಎರಡು ವರ್ಷಗಳ ಮುಂಚೆ ಉಸ್ತಾದರು ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬಂದಿದ್ದಾಗ ಉಳ್ಳಾಲ ಮೇಲಂಗಡಿಯಲ್ಲಿ ಉಸ್ತಾದರನ್ನು ಮುಖತಃ ಭೇಟಿಯಾಗಿ ಮಾತನಾಡಿದ್ದೆ. ಇಂದು ಉಸ್ತಾದರು ನಮ್ಮಿಂದ ಕಣ್ಮರೆಯಾದ ವಿಷಯ ತಿಳಿದು ಬಂತು. ಸರಳ ಸಜ್ಜನಿಕೆಯ, ಸದಾ ಹಸನ್ಮುಖಿ, ನಗುಮುಖದ, ಮದ್ರಸ ಶಿಕ್ಷಣ ರಂಗಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿದ ಎಸಿ ಎ ಕಾಂತಪುರಂ ಉಸ್ತಾದ್ ಇನ್ನು ನೆನಪು ಮಾತ್ರ.
ಅಲ್ಲಾಹನು ಉಸ್ತಾದರಿಗೆ ಮಗ್ಫಿರತ್, ಮರ್ಹಮತ್ ನೀಡಿ ಅನುಗ್ರಹಿಸಲಿ. ಉಸ್ತಾದರ ಖಬರ್ ಹಾಗು ಪಾರತ್ರಿಕ ಬದುಕು ಸಂತೋಷಗೊಳಿಸಲಿ. ಉಸ್ತಾದರ ಪದವಿಯನ್ನು ಅಲ್ಲಾಹನು ಉನ್ನತಿಗೇರಿಸಲಿ. ಸ್ವರ್ಗೋದ್ಯಾನದಲ್ಲಿ ಉಸ್ತಾದರನ್ನು ಮತ್ತು ನಮ್ಮನ್ನು ಒಗ್ಗೂಡಿಸಲಿ. ಆಮೀನ್.